78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಮಗೆಲ್ಲಾ ಹಾರ್ದಿಕ ಸುಸ್ವಾಗತ...... ಅಕ್ಷರ ಜಾತ್ರೆಗೆ ಬನ್ನಿ..... WELCOME TO GANGAVATHI ( KOPPAL DISTRICT) ಕೊಪ್ಪಳ ಜಿಲ್ಲೆಯ ಮಾಹಿತಿ,ಪ್ರವಾಸಿ ತಾಣಗಳ ವಿವರಗಳಿಗಾಗಿ kannadanet.com, kannadanet.blogspot.com ನೋಡಿ

Sunday, December 11, 2011

78ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ: ಬಿಜಾಪುರದಲ್ಲಿ ಮತ್ತೆ ಸಿಗೋಣ...


ಗಂಗಾವತಿ, ಡಿ.11: ಅರೆ.... ‘ಸಮ್ಮೇಳನ ಮುಗಿದು ಹೋಯ್ತ’ ಎಂದು ಎಲ್ಲರ ಮುಖದಲ್ಲಿ ಬೇಸರ. ‘ಬಿಜಾಪುರದಲ್ಲಿ ಮತ್ತೆ ಸಿಗೋಣ’ ಎಂದು ಸಮಾಧಾನದೊಂದಿಗೆ ಕನ್ನಡದ ಮನಸ್ಸುಗಳಿಂದು ಭಾರದ ಹೃದಯದಿಂದ ಬೀಳ್ಕೊಟ್ಟವು. ಎಲ್ಲಿ ನೋಡಿದರೂ ಜನಸಾಗರ. ‘‘ಮೂರು ದಿನದ ಮುಂಚೆ ಎಲ್ಲಿತ್ತು ಈ ಜನಸಾಗರ. ಗಂಗೋಪಾದಿಯಲ್ಲಿ ಎಲ್ಲಿಂದ ಹರಿದು ಬಂತು ಇಲ್ಲಿಗೆ’’ ಇದು ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷರ ಬೆರುಗಿನ ನುಡಿ.

ಮೂರು ದಿನದ ನುಡಿಜಾತ್ರೆಯಲ್ಲಿ 4 ಲಕ್ಷಕ್ಕೂ ಮೀರಿ ಕನ್ನಡದ ಮನಸ್ಸುಗಳು ಭಾಗವಹಿಸಿ ಇತಿಹಾಸ ನಿರ್ಮಿಸಿದವು. ಸಮಾರೋಪ ಭಾಷಣ ಮಾಡಿದ ಹಂಪನಾ, ಇಷ್ಟೊಂದು ಜನಸಾಗರ ನೋಡಿ ನಾನು ಬಹಳ ವರ್ಷಗಳೇ ಆಗಿದ್ದವು ಎಂದು ಖುಷಿಪಟ್ಟರು. ಸುತ್ತಮುತ್ತಲ ಹಳ್ಳಿಯ ಅಕ್ಷರಸ್ಥರು, ಅನಕ್ಷರಸ್ತರು ಕನ್ನಡದ ಜಾತ್ರೆಯಲ್ಲಿ ಪ್ರತಿದಿನವೂ ಮಕ್ಕಳು-ಮರಿಮಕ್ಕಳೊಂದಿಗೆ ಓಡೋಡಿ ಬರುವ ದೃಶ್ಯ ಸಾಮಾನ್ಯವಾಗಿತ್ತು.

‘‘ನಮ್ಮ ಭಾಗದಾಗ ಈ ಕನ್ನಡಮ್ಮನ ದೊಡ್ಡ ತೇರ ಎಳಿತ್ತೈ ಅಂದ್ರು, ಅದಕ್ಕ ಬಂದೆವ್ರಿ’’ ಎಂದು ಗೀಣಗೇರಾ ಗ್ರಾಮದ ಅಕ್ಷರ ಬರದ ರಾಮಪ್ಪ ಅಮಾಯಕತೆಯಿಂದಲೇ ನುಡಿದರು.

ಸಮ್ಮೇಳನದ ಕೊನೆಯ ದಿನವಾದ ಇಂದು ತಾಲೂಕಿನ ಗ್ರಾಮೀಣ ಪ್ರದೇಶಗಳು ಸೇರಿದಂತೆ ವಿವಿಧೆಡೆಯಿಂದ ಸಮ್ಮೇಳನದ ಮುಖ್ಯವೇದಿಕೆಯತ್ತ ದೌಡಾಯಿಸಿದ ಜನರು ಕನ್ನಡದ ಹಬ್ಬದಲ್ಲಿ ತಾವು ಪಾಲ್ಗೊಳ್ಳಲು ಉತ್ಸುಕರಾಗಿ ದ್ದುದು ಕಂಡು ಬಂತು. ವಿಶೇಷವಾಗಿ ರವಿವಾರವಾಗಿದ್ದ ರಿಂದ ಹೆಚ್ಚಿನ ಸಂಖ್ಯೆಯಲ್ಲಿದ್ದ ಜನ ಮುಗಿಬಿದ್ದು ವಾಹನಗಳಲ್ಲಿ ಆಗಮಿಸಿದರು. ಎಲ್ಲಾ ಹೋಗುವ ಮತ್ತು ಬರುವ ವಾಹನಗಳು ಜನಜಂಗುಳಿಯಿಂದ ತುಂಬಿಕೊಂಡು ಬರುತ್ತಿದುದು ಕನ್ನಡಾಭಿಮಾನವನ್ನು ಎತ್ತಿ ತೋರಿಸುತ್ತಿತ್ತು.


ಅಕ್ಷರಶಃ ಜಾತ್ರೆ: ಎರಡು ದಿನ ಅಷ್ಟಾಗಿ ವ್ಯಾಪಾರವಿಲ್ಲದ ಪುಸ್ತಕ ಪ್ರದರ್ಶಕರು ಇಂದು ಖುಷಿಯಿಂದ ವ್ಯಾಪಾರದಲ್ಲಿ ತೊಡಗಿದ್ದರು. ಇಂದು ಎಲ್ಲ ಮಳಿಗೆಗಳಲ್ಲೂ ಭರಪೂರ ಜನ. ಮನೆಗೆ ಮರಳುವ ಅವಸರದಲ್ಲಿದ್ದ ಸಾಹಿತ್ಯಾಭಿ ಮಾನಿಗಳು ಪುಸ್ತಕಕೊಳ್ಳುವ ತರಾತುರಿಯಲ್ಲಿದ್ದರು. ಪುಸ್ತಕ ಅಂಗಡಿಗಳಿಗೆ ಸಮ-ಸಮವಾಗಿಯೆ ಬಟ್ಟೆ, ರಗ್ಗು, ಸ್ವೇಟರ್, ಖಾರಾ ಮಂಡಕ್ಕಿ ಸೇರಿದಂತೆ ಎಲ್ಲ ಅಂಗಡಿಗಳು ನೆರೆದಿದ್ದರಿಂದ ಸಭಾಂಗಣದ ಸುತ್ತಮುತ್ತ ಅಕ್ಷರಶಃ ಜಾತ್ರೆ ನೆರೆದಿತ್ತು. ಕಳೆದ ಮೂರು ದಿನಗಳಿಂದ ನಡೆದ ವಿಚಾರಗೋಷ್ಠಿ, ಸಂವಾದ, ಜನಪದ, ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ್ನಣೆ ಗಳಿಸಿದವು. ತಾಲೂಕಿನಿಂದ ಅಷ್ಟೇ ಅಲ್ಲದೆ ಅಂತರ ರಾಜ್ಯಗಳಿಂದ ಉತ್ಸುಕರಾಗಿ ಆಗಮಿಸಿರುವ ಅಭಿಮಾನಿಗಳು ಸಮ್ಮೇಳನಕ್ಕೆ ಸಾಕ್ಷಿಯಾದರು. ಬಿಡುವಿಲ್ಲದ ಕೆಲಸದಲ್ಲಿಯೂ ಕನ್ನಡಮ್ಮನ ನೆನೆಯುವ ಕಾಯಕದಲ್ಲಿ ನಿರತರಾಗಿರುವ ಸ್ಥಳೀಯ ಜನರಿಗೆ ಈ ಮೂರು ದಿನಗಳು ಹಬ್ಬದ ಸಂಭ್ರಮವನ್ನೆ ನೀಡಿತು.

ವಿವಿಧೆಡೆಗಳಿಂದ ಆಗಮಿಸಿದ ಕೆಲ ಸಾಹಿತ್ಯಾಸಕ್ತರಲ್ಲಿ ಕೆಲವರು ಪುಸ್ತಕದ ಪ್ರೀತಿಗೆ ಮಾರು ಹೋದರೆ, ಇನ್ನುಳಿದವರು ಸಭೆ ಮತ್ತು ಸಮಾರಂಭಗಳ ವೀಕ್ಷಣೆಯಲ್ಲಿ ತಲ್ಲೀನರಾಗಿದ್ದರು. ಕನ್ನಡದ ಬಗೆಗಿನ ಕಾಳಜಿ, ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸುವ ಬಗೆಗಿನ ಒತ್ತು, ಯುವ ಜನತೆಯ ಮುಂದಿನ ಹೆಜ್ಜೆಗಳ ಕುರಿತಾದ ಸಂವಾದಗಳು ಜನಾಕರ್ಷಣೆಯ ಕೇಂದ್ರ ಬಿಂದುವಾಗಿದ್ದವು.

ಯುವ ಪ್ರೋತ್ಸಾಹ: ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಾಗಿ ಕಂಡು ಬಂದುದು ಯುವ ಸಮೂಹ. ಗುಂಪು ಗುಂಪಾಗಿ ಅಲ್ಲಲ್ಲಿ ನೆರೆದಿರುವ ಯುವಕರ ಕೆಲ ಗುಂಪುಗಳು ಸಭೆ, ಸಮಾರಂಭಗಳ ವೀಕ್ಷಣೆಗೆ ಮುಂದಾದರೆ ಕೆಲವರು ಪುಸ್ತಕ ಕೊಂಡುಕೊಳ್ಳುವ, ಕೆಲವರು ಅಂಡಲೆಯುವ ಕಾರ್ಯಕ್ಕೆ ಮುಂದಾಗಿದ್ದರು. ಗ್ರಾಮೀಣ ಪ್ರದೇಶಗಳಿಂದ ಆಗಮಿಸಿದ ಜನರಂತೂ ಇಲ್ಲಿ ಏನೋ ನಡೆಯುತ್ತಿದೆ ಎಂಬಂತೆ ಎಲ್ಲವನ್ನು ಗಾಬರಿಯಿಂದಲೇ ವೀಕ್ಷಿಸುತ್ತಿದ್ದರು. ಹಾಗೆಯೇ ವಿದ್ಯಾರ್ಥಿ ಗಳು, ಚಿಕ್ಕ ಚಿಕ್ಕ ಮಕ್ಕಳು ಕನ್ನಡ ಬಾವುಟವನ್ನು ಹಿಡಿದು ಕನ್ನಡಾಭಿಮಾನ ಪ್ರದರ್ಶಿಸುತ್ತಿದ್ದುದು ಕಂಡು ಬಂತು. ಮಳಿಗೆ ಬಗ್ಗೆ ಅಸಂತೃಪ್ತಿ: ಸಮ್ಮೇಳನ ಯಶಸ್ಸಿನಿಂದ ಬೀಗುತ್ತಿರುವ ಸಂಘಟಕರ ನಡುವೆ ಪುಸ್ತಕದಂಗಡಿಗಳ ಮಾಲಕರ ಅಳಲು ಕೇಳಿಬರುತ್ತಿತ್ತು. ಸಮ್ಮೇಳನದ ಕೊನೆಯ ದಿನವಾದ ಇಂದು ಬಹುತೇಕ ಪುಸ್ತಕದಂಗಡಿಗಳು ಕಣ್ಮರೆ ಯಾಗಿದ್ದವು. ಪುಸ್ತಕದಂಗಡಿಗಳ ಮಾಲಕರು ತಾವು ಬಾಡಿಗೆಯಾಗಿ ಪಡೆದ ಟೇಬಲ್, ಕುರ್ಚಿಗಳಿಗೆ ಹಣ ಪಾವತಿ ಮಾಡುವಷ್ಟು ವ್ಯಾಪಾರವಾಗಿಲ್ಲ ಎಂಬುದು ಅವರ ನೊಂದನುಡಿ.

ಹೆಚ್ಚು ಸಿಹಿ-ಸ್ವಲ್ಪ ಕಹಿ: ಕನ್ನಡ ಶಾಲೆಗಳಿಗಾಗಿ ಧ್ವನಿ ಎತ್ತಿದವರಿಗೆ ಲಾಠಿ ರುಚಿ ತೋರಿಸಿ ಜೈಲಿಗೆ ಅಟ್ಟಿರುವುದು, ಬ್ಯಾನರ್‌ಗಳಲ್ಲಿ ಹೆಸರಿಲ್ಲವೆಂದು ತಂಗಡಗಿ ಬೆಂಬಲಿಗರ ಪ್ರತಿಭಟನೆ, ಪುಸ್ತಕ ವ್ಯಾಪಾರಿಗಳ ಅಸಂತೃಪ್ತಿ ಹೀಗೆ ಕೆಲವೇ ಬೆರಳೆಣಿಕೆಯ ಕಹಿ ಘಟನೆಗಳನ್ನು ಬಿಟ್ಟರೆ ಸಮ್ಮೇಳನ ಯಶಸ್ಸು ಕಂಡಿತು. ದೂರದ ಕನ್ನಡ ಜಿಲ್ಲೆಗಳಿಂದ ಬಂದಿದ್ದ ಜನರು ಗಂಗಾವತಿಯ ಹೃದಯ ವಂತಿಕೆಯನ್ನು, ಆತಿಥ್ಯ ಸೇವೆಯನ್ನು ಮನಸ್ಸು ತುಂಬಿ ಹೊಗಳುತ್ತಾ ತಮ್ಮೂರಿನ ದಾರಿ ಹಿಡಿದರು. ಆದರೆ ಗಂಗಾವತಿಯ ತಾಲೂಕು ಬಸ್ ನಿಲ್ದಾಣಕ್ಕೆ ಒಮ್ಮೆಲೇ ಧಾವಿಸಿದ ಜನರನ್ನು ಹೊತ್ತೊಯ್ಯುವಷ್ಟು ಬಸ್ಸುಗಳಿಲ್ಲದ್ದರಿಂದ ಜನ ಪರದಾಡಬೇಕಾಯಿತು.

2 comments:

  1. successfull sammelana...in gangavati

    ReplyDelete
  2. ನಮಸ್ಕಾರಗಳು,
    ಸಾಹಿತ್ಯ ಸಮ್ಮೇಳನ ಯಶಸ್ವಿಯಾದ ಹಿನ್ನೆಲೆಯಲ್ಲಿ, ಎಲ್ಲಾ ಕಾಯ೯ಕ್ರಮಗಳನ್ನು ನೋಡಲು ಸಾದ್ಯವಾಗದಿದ್ದರು ಮಾಹಿತಿ ತ೦ತ್ರಜ್ನಾನದ ಸಹಾಯದಿ೦ದ ಮನೆಯಲ್ಲೋ ಅಥವಾ ಆಫಿಸಿನಲ್ಲೋ ಕುಳಿತು ಓದಿ, ನೋಡಿ ಸ೦ತೋಷವಾಗಿದೆ, ಅದಕ್ಕಾಗಿ ಸಮಸ್ತ ಪತ್ರಕತ೯ ಮಿತ್ರರಿಗೆ ಧನ್ಯವಾದಗಳು.

    ಇಂತಿ
    ಪ್ರಕಾಶ ಮುಗಳಿ.
    ಗದಗ.

    ReplyDelete